Friday, March 7, 2008

ಕಾರಣ..!?!

ಆಕೆಯನ್ನು ಮದುವೆಯಾಗಲು
ಆತ ಕೇಳುತ್ತಿದ್ದಾನಂತೆ
ಭಾರಿ ತೆರಿಗೆ..
ಯಾಕೆಂದರೆ...?
ಮದುವೆಗೆ ಮುಂಚೆಯೆ
ತಯಾರಾಗಿದೆ ಹೆರಿಗೆ..!!

ರಹಸ್ಯ...

ಹೆಂಡತಿ ಹೆತ್ತು
ತಿಂಗಳು ಮೂರಾದರೂ
ಗಡ್ಡ ಬೋಳಿಸಿಲ್ಲ ಯಾಕೆ..!
ಈ ನಡುವೆ ಗರ್ಭಿಣಿ
ನೆರಮನೆಯಾಕೆ...

ಕೊಡುಗೆ...

ಹೇಳುತ್ತಿದ್ದರು ತುಂಬಿದ ಸಭೆಯಲ್ಲಿ
ಶಾಲಾ ಕಟ್ಟಡದ ಅಭಿವೃದ್ದಿಗೆ
ಸಹಕರಿಸಿ ನಿಮ್ಮ ಕೈಲಾದ ಮಟ್ಟಿಗೆ...
ದೂರದಿಂದ ಕೈ ಬೀಸಿ ಎಸೆಯುತ್ತಾ
ಯಾರೋ ಕೂಗಿದರು ಎತ್ತರದ ದನಿಯಲ್ಲಿ
ಇದೋ ಪಡೆಯಿರಿ ನನ್ನದೆರಡು ಇಟ್ಟಿಗೆ ...||

ಗೆದ್ದು ಸೋತವನು..

ಅದೆಷ್ಟು ಗೌರವವಿತ್ತು ನಿನ್ನ ಮೇಲೆ
ಬಾಲಕನಾಗಿದ್ದರೂ ಒಂದಿಷ್ಟೂ ಭಯಪಡದೆ
ತಾಟಕಿಯಾದಿಯಾಗಿ ರಕ್ಕಸರ ಹುಟ್ಟಡಗಿಸಿದಾಗ...
ಶಾಪಗ್ರಸ್ತ ಮುನಿಸತಿಗೆ ಜೀವ ತಂದಾಗ...
ಬಿಲ್ಲು ಮುರಿದು ಮನದೊಡತಿಯ ಗೆದ್ದು ತಂದಾಗ...
ಪಿತೃವಾಕ್ಯ ಪರಿಪಾಲಕನಾಗಿ ಅಡವಿಗಭಿಮುಖನಾದಾಗ...||
ನಿಜವಾಗಿಯೂ ದೇವತ್ವದ ದರ್ಶನವಾಯಿತು
ಭೋಗ ಭಾಗ್ಯಗಳ ತೊರೆದು, ಬರಿಗಾಲಲ್ಲೇ ನಡೆದು
ಪರ್ಣ ಕುಟೀರದೊಳಗೂ ಪರಮಾನಂದದೊಳಿದ್ದಾಗಾ...
ವಿರಹದುರಿಯಲಿ ಬೆಂದು,ನೊಂದು,ಪ್ರಿಯ ಮಡದಿಗಾಗಿ
ಪ್ರೇಮ ಭೈರಾಗಿಯಾಗಿ ಪರಿ ಪರಿಯಲಿ ಪರಿತಪಿಸಿದಾಗ...
ಕಪಿ ಸೈನ್ಯ, ಸೇತು ಬಂಧನ, ಘೋರ ಕದನ ದುಷ್ಟ ಮರ್ದನ
ಇನ್ನೇನು ನೀನು ದೇವನಹುದಹುದೆಂದು ಭಕ್ತಿ ಪರವಶನಾಗಿ
ಭಾವೋನ್ಮಾದದಿ ಹುಚ್ಚೆದ್ದು ಕುಣಿಯ ಬೇಕೆಂಬಾಗ...
ಎಂಥಹಾ ಭಾವಘಾತ, ಪತಿತೆಯಾಗಿ ಕಂಡಳೆ ಪುನಿತೆ ?
ರಾಮನ ಬಾಯಿಂದ ಅಗ್ನಿಪರೀಕ್ಷೆಯ ಮಾತೆ ?
ಅಗ್ನಿಯುರಿಗಂಜದೆ ಉರಿ ಮಾತಿಗತ್ತಳು ಸೀತೆ .

ದೇವತ್ವವೆಲ್ಲಿ ರಾಮ, ಬರಿ ಮನುಷ್ಯತ್ವವೂ ಇರದ
ಎಲ್ಲರಂತೆ ಸಾಮಾನ್ಯ ಗಂಡಾಗಿ ನಿಂತೆ !!
ಸೀತೆ ಗೆದ್ದಳು, ಪುರುಷ ಸಮಾಜ ಗೆದ್ದಿತು
ಆದರೆ ರಾಮ ನೀನು... ಗೆದ್ದು ಸೋತೆ ||

Wednesday, March 5, 2008

ಭ್ರಮೆಯ ನೆಚ್ಚಿ...

ಹಾಡಿದೆ, ಬಡಬಡಿಸಿದೆ ಬದುಕಿನುದ್ದಕ್ಕೂ
ಬವಣೆಗಳ ಒಂದಿಷ್ಟು ಮರೆಯಲೆಂದು
ಬಡಾಯಿಯ ಪಟ್ಟ ದಕ್ಕಿತೇ ವಿನಹಃ
ಬೆಲೆಯಿಲ್ಲ ಭಾವನೆಗೆ ಕಾಸಿನೊಂದು ||

ಸ್ವಾಗತಿಸಿದೆ,ಸೇವಿಸಿದೆ ಮನೆಗೆ ಬಂದವರ
ಅತಿಥಿ ದೇವರುಗಳೆಂದು ಮಣೆಯಕೊಟ್ಟು
ತಿಂದರು,ತೇಗಿದರು,ಊರೆಲ್ಲಾ ಊದಿದರು
ಮನೆಯ ಕುಂದು ಕೊರತೆಯನೆಲ್ಲ ಲೆಕ್ಕವಿಟ್ಟು ||

ಅಂತರಂಗವ ತೆರೆದಿಟ್ಟೆ ಒಂದಿಷ್ಟೂ ಮುಚ್ಚಿಡದೆ
ಬಳಗದೊಳಿದ್ದವರೆಲ್ಲಾ ನನ್ನವರೆಂದು
ಕಿವಿಕೂಟ್ಟು ಕೇಳಿದರು, ಕಥೆ ಕಟ್ಟಿ ಹಾಡಿದರು
ನನ್ನ ಜೀವನವೊಂದು ನಗೆಗಿರುವ ಪಾತ್ರವೆಂದು ||

ಕುಣಿದೆ ಕುಪ್ಪಳಿಸಿದೆ ನಗುತಿರಲು ಜಗವೆಲ್ಲ
ನಾಳೆಗಳೆಲ್ಲಾ ನವೋಲ್ಲಾಸದ ದಿನಗಳೆಂದು
ನಗೆಯ ಕೇಕೆಗಳಲ್ಲಿ ನನ್ನ ದನಿ ಕೇಳದೆ
ಅಣಕಿಸಿತು ಒಳದನಿ ಮೂರ್ಖ ನೀನೆಂದು ||

ಸಾಗಿದೆ ಪಯಣ ಮುಖಗಳಿಲ್ಲದ ಮನುಷ್ಯರೊಂದಿಗೆ
ಎಲ್ಲರು ಮನ್ಮಥರೆಂಬ ಭ್ರಮೆಯ ನೆಚ್ಚಿ
ನಂಬಿ ಬಿಟ್ಟಿದೆ ಮನಸು, ಭೂಮಿ ಬಾನದೆಲ್ಲೊ
ಒಂದಾಗಿದೆ ಎಂದು ಕಣ್ಣು ಮುಚ್ಚಿ ||

Tuesday, March 4, 2008

ಅಂತರ್ಮುಖಿಯಾಗು...

ಅಂತರ್ಮುಖಿಯಾಗು ಮನವೆ
ಜಗದ ಮೇಲಾಟಗಳ ಸದ್ದಡಗೊವರೆಗೆ
ಮಥಿಸು ಮನದ ಕಡಲನ್ನು
ಶಾಂತಿ ಅಮ್ರತಧಾರೆ ಉದಿಸುವಲ್ಲಿವರೆಗೆ ||

ನಿನ್ನೊಳಗೂ ಯುದ್ಧ,ಜಗದೊಳಗೂ ಯುದ್ಧ
ಕಿವುಡಾಗು ಕಾಳಗದ ಕ್ರೂರ ಕರೆಗೆ
ಹುಡುಕು ಶಾಂತಿ ಸೂತ್ರಗಳನ್ನು,ಮೌನವಾಗಲು
ಮನದ ಹೊಯ್ದಾಟವೊಂದು ಘಳಿಗೆ ||

ಅತ್ರಪ್ತ ಆತ್ಮ ಹೊರಗೆಲ್ಲೊ ಸುತ್ತುತ್ತಿದೆ
ಸತ್ತಿರಲು ಮೌಲ್ಯಗಳು ಕಡು ಲೋಭದುರಿಗೆ
ಕೈಗೂಡದಾಸೆಗಳು ಉಗ್ರ ಸುಳಿಯಾಗದಂತೆ
ಬಂಧಿಸಿಡು ಆತ್ಮವನು ಭಾವಕಡಲಾಳದೊಳಗೆ ||

ಮುಳುಗೇಳು ಸಹಿಷ್ಣುತೆಯ ಸಲಿಲದಲಿ
ದ್ವೇಷಾಸೂಯೆಗಳ ಒಡಲಾಗ್ನಿ ತಣಿವವರೆಗೆ
ಯಾತ್ರೆ ಮಾಡಲಿ ಮನಸು ಜ್ಞಾನ ಕ್ಷೇತ್ರಗಳತ್ತ
ವೈಚಾರಿಕತೆಯು ಪುಣ್ಯ ತುಂಬಿ ತುಳುಕಾಡೊವರೆಗೆ ||

ಕಣ್ಣಿರದ,ಕಿವಿಯಿರದ,ಮಾತಿರದ ಮುನಿಯಾಗು
ಅಂತರಂಗದಿ ದಿವ್ಯ ಚೇತನ ಆವಿರ್ಭವಿಸೊವರೆಗೆ
ಜಗದ ಕೋಲಾಹಲಕೆ ಮಣಿಯದ ತಾಪಸಿಯಾಗು
ನಿನ್ನೊಳಗೆ ವಿಶ್ವಮಾನವತ್ವದ ಸಿದ್ಧಿ ಸಿದ್ಧಿಸೊವರೆಗೆ ||